ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ಬೆಳ್ಳಬೆಳಿಗ್ಗೆ ಮತ್ತೆ ಪೊಲೀಸ್ ಗನ್ ಸದ್ದು ಮಾಡಿದ್ದು, ಇಬ್ಬರು ದರೋಡೆಕೋರರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಒಟ್ಟು ಮೂವರನ್ನು ಬಂಧಿಸಿದ್ದಾರೆ. ಇನ್ನೋರ್ವ ಪರಾರಿಯಾಗಿದ್ದಾನೆ.
ಉತ್ತರ ಪ್ರದೇಶದಿಂದ ಬಂದಿದ್ದ ನಾಲ್ವರು ದರೋಡೆಕೋರರ ಸುಳಿವು ಅರಿತು ದೇವರಗುಡಿಹಾಳದ ಹತ್ತಿರ ಬಂಧಿಸಲು ಮುಂದಾದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಇಬ್ಬರ ಮೇಲೆ ಗುಂಡಿನ ದಾಳಿ ಮಾಡಿ ಹಾಗೂ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಇನ್ನೋರ್ವ ಕಾರ್ ಸಮೇತ ಪರಾರಿಯಾಗಿದ್ದು, ಮುಂದೆ ರಾಯನಾಳದ ಸೇತುವೆ ಕೆಳಗೆ ಕಾರು ಸುಟ್ಟು ಹಾಕಿ ಓಡಿ ಹೋಗಿದ್ದಾನೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಗುಂಡೇಟಿನಿಂದ ಗಾಯಗೊಂಡ ಇಬ್ಬರು ದರೋಡೆಕೋರರನ್ನು ನಗರದ ಕಿಮ್ಸ್ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಗುಂಡೇಟು ತಿಂದು ಗಾಯಗೊಂಡ ದರೋಡೆಕೋರರ ತಂಡದ ಹಿನ್ನೆಲೆ ರೋಚಕವಾಗಿದ್ದು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅದರ ವಿವರಗಳನ್ನು ಸುದ್ದಿಗಾರರೆದುರು ವಿವರಿಸಿದರು.
10 ರಿಂದ 20 ಜನರಿದ್ದ ಈ ದರೋಡೆಕೋರರ ತಂಡ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಿಗೆ ಬೇಕಾದ ನಟೋರಿಯಸ್ ತಂಡವಾಗಿದೆಯೆನ್ನಲಾಗಿದ್ದು, ದೆಹಲಿ, ಉತ್ತರ ಪ್ರದೇಶಗಳಲ್ಲೂ ಸಕ್ರಿಯವಾಗಿತ್ತು. ಇದೇ ತಿಂಗಳು ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಸುಮಾರು 20 ಲಕ್ಷರೂ. ಮೌಲ್ಯದ ವಸ್ತುಗಳ ಕಳ್ಳತನವಾಗಿದ್ದು, ಹಿಂದೆ ವಿದ್ಯಾಗಿರಿ, ಧಾರವಾಡ ಶಹರ, ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿಯೂ ಇದೇ ಮಾದರಿ ಪ್ರಕರಣಗಳು ನಡೆದಿದ್ದವು.

ಈ ತಂಡದ ದರೋಡೆಕೋರರನ್ನು ಟ್ರ್ಯಾಕ್ ಮಾಡಿದಾಗ ಹುಬ್ಬಳ್ಳಿಯತ್ತ ಬರುತ್ತಿರುವ ಮಾಹಿತಿ ಲಭ್ಯವಾಗಿತ್ತು. ಹುಬ್ಬಳ್ಳಿಯಲ್ಲಿ ಮಾರುತಿ ಎಂಬುವವರ ಮೇಲೆ ಹಲ್ಲೆ ಮಾಡಿದ ದರೋಡೆಕೋರರ ತಂಡ ಬೈಕ್ ಕಸಿದುಕೊಂಡು ಪರಾರಿಯಾಗಿ ನಂತರ ರಾಯನಾಳದ ಸಮೀಪದಲ್ಲಿ ದರೋಡೆಗಾಗಿ ಹೊಂಚು ಹಾಕಿ ಕುಳಿತಿದ್ದುದು ತಿಳಿದು ಬಂದಿದೆ.

ತಂಡದ ಮೇಲೆ ದಾಳಿ ನಡೆಸಿ ಹಿಡಿಯಲೆತ್ನಿಸಿದ ಪೊಲೀಸ್ ಸಿಬ್ಬಂದಿ ಮೇಲೆ ದರೋಡೆಕೋರರು ಹಲ್ಲೆ ನಡೆಸಿ ಕಣ್ಣಿಗೆ ಕಾರದ ಪುಡಿ ಎರಚಿ ಪರಾರಿಯಾಗಲು ಯತ್ನಿಸಿದಾಗ ಮೊದಲು ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿ ನಂತರ ದರೋಡೆಕೋರರ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ಆಯುಕ್ತರು ತಿಳಿಸಿದರು.

ಬಂಧಿತ ದರೋಡೆಕೋರರು ಹಾಗೂ ಅವರ ತಂಡದ ವಿವರಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದು, ಘಟನೆಯಲ್ಲಿ ಗಾಯಗೊಂಡ ಪಿಎಸ್ಐ ದೇವೇಂದ್ರ ಮಾವಿನಂಡಿ, ಸಿಬ್ಬಂದಿ ದ್ಯಾನೇಶ್, ಆನಂದ ಜಾವೂರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.