ಹುಬ್ಬಳ್ಳಿ: ಕೊಲೆ ಯತ್ನ, ಮತ್ತು ಸಾರ್ವಜನಿಕ ಆಸ್ತಿ ನಾಶಗೊಳಿಸಿದ ಆರೋಪದಡಿಯಲ್ಲಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್ ಕಾರ್ಪೊರೇಟರ್ ಸುವರ್ಣ ಕಲ್ಲಕುಂಟ್ಲ ಸೇರಿ 11 ಜನರ ವಿರುದ್ಧ ವಿವಿಧ ಶಿಕ್ಷೆ ಹಾಗೂ ದಂಡ ವಿಧಿಸಿ, ನಗರದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಂಗಳವಾರ ತೀರ್ಪು ನೀಡಿದೆ.
ಹಳೇ ದ್ವೇಷವಿಟ್ಟಕೊಂಡು 2010 ರಲ್ಲಿ ರಾತ್ರಿ ಏಕಾಏಕಿ ಕೇಶ್ವಾಪುರದ ಗಾಂಧಿವಾಡದ ಮನೆಗೆ ನುಗ್ಗಿದ ಗುಂಪೊಂದು, ಶಂಷಾದ್ ಮುನಗೇಟಿ, ಸಾಕ್ಷಿದಾರರಾದ ರೀನಾ ಲಾಜರಸ ದಮ್ಮು, ರುತ್ಲಾಜರಸ ದಮ್ಮು, ಸ್ಯಾಮುವೇಲ್ ಮುನಿಗೇಟಿ, ಪ್ರವೀಣಕುಮಾರ ವೇಲಂ, ಚಂದ್ರಕಲಾ ಮುನಿಗೇಟಿ, ದಿವ್ಯಾಕುಮಾರಿ ಮುನಿಗೇಟಿ, ದೇವರಾಜ ಮುನಿಗೇಟಿ, ದೇವಕುಮಾರಿ ಕಲ್ಲಕುಂಟ್ಲ, ಜಾಸ್ಮಿನ್ ಮುನಿಗೇಟಿ ಅವರ ಮೇಲೆ ಮಚ್ಚು, ರಾಡ್, ಬಡಿಗೆಯಿಂದ ಹಲ್ಲೆ ಮಾಡಿದ್ದರು. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆಯೊಡ್ಡಿದ್ದು, ದ್ವಂಬಿ ಎಬ್ಬಿಸುವ ಉದ್ದೇಶದಿಂದ ತಾವು ಬರುವ ಹಾದಿಯಲ್ಲಿನ ಬೀದಿ ದೀಪಗಳನ್ನು ಹೊಡೆದು ಹಾಕಿದ್ದರು. ಈ ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದಿನ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಬಿ.ಟಿ. ಬದ್ನಿ, ಅಬ್ದುಲ್ ರಹಿಮಾನ, ಬಿ.ಎನ್. ಅಂಬಿಗೇರ ತನಿಖೆ ನಡೆಸಿ ಆರೋಪಿತರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಕಾರ್ಪೊರೇಟರ್ ಸುವರ್ಣ ಕಲ್ಲಕುಂಟ್ ಸೇರಿದಂತೆ ಲಾಜರಸ್ ಲುಂಜಾಲ, ಸ್ಯಾಮಸಂಗ್ ಲುಂಜಾಲ, ಶಶಿಧರ ರಾಥೋಡ, ಸುಶಾ ಅಲಿಯಾಸ್ ಸುಶೆರಾಜ, ಮೇರಿಯಮ್ಮ ಲುಂಜಾಲ, ನಿರ್ಮಲಾ ಜಂಗಮ, ಯೋಗರಾಜ ಪೂಜಾರ, ರಾಜು ಕೊಂಡಯ್ಯ ಆರ್ಯ ಅವರ ಮೇಲಿನ ಆರೋಪ ಸಾಬೀತುಪಡಿಸಿತು. ಐಪಿಸಿ 307ರಡಿ 3 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ಸೇರಿದಂತೆ ಹೀಗೆ ವಿವಿಧ ರೀತಿಯ ಶಿಕ್ಷೆ ಮತ್ತು ಧಂಡ ವಿದಿಸಿದೆ. ಹಾಗೂ ಪ್ರಿವೆನ್ಷನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಆ್ಯಕ್ಟ್ ಕಲಂ 3ರಡಿ ಪ್ರತಿಯೊಬ್ಬರಿಗೂ 1 ವರ್ಷ ಶಿಕ್ಷೆ ಹಾಗೂ 500 ರೂ. ದಂಡ ವಿಧಿಸಿ ನ್ಯಾಯಾಧೀಶ ಬಿ. ಪರಮೇಶ್ವರ ಪ್ರಸನ್ನ ಅವರು ತೀರ್ಪು ನೀಡಿದ್ದಾರೆ.
ಇನ್ನು ಸರ್ಕಾರದ ಪರವಾಗಿ ಹಿಂದಿನ ಅಭಿಯೋಜಕಿ ಗಿರಿಜಾ ತಮ್ಮಿನಾಳ ಭಾಗಶಃ ವಿಚಾರಣೆ ಮಾಡಿದ್ದರು. ಈಗಿನ ಸರ್ಕಾರಿ ಅಭಿಯೋಜಕ ಬಿ.ವಿ. ಪಾಟೀಲ ಅವರು ಹೆಚ್ಚಿನ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಾದ ಅಬ್ರಾಹಂ ಲುಂಜಾಲ ಹಾಗೂ ಶ್ರೀಧರ ರಾಥೋಡ ಮೃತಪಟ್ಟಿದ್ದು, ಇನ್ನೊಬ್ಬ ಆರೋಪಿ ಶಬ್ಬೀರ ಶೇಕ್ ತಲೆಮರೆಸಿಕೊಂಡಿದ್ದು, ವಿಚಾರಣೆ ಬಾಕಿ ಇಡಲಾಗಿದೆ.