ಹುಬ್ಬಳ್ಳಿ: ಪೊಲೀಸ್ ಎಂದರೇ ಭಯವಲ್ಲ ಭರವಸೆ ಎಂಬುದನ್ನು ಜನತೆ ಅರಿತುಕೊಳ್ಳಿ ಎಂದು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದರು.
ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಹು-ಧಾ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಿಇಐಆರ್ ಪೋರ್ಟಲ್ ಮುಖಾಂತರ ಪತ್ತೆಹಚ್ಚಿದ ಮೊಬೈಲ್ ಫೋನ್ಗಳ ವಿತರಣಾ ಸಮಾರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು ಇಂದು ಪ್ರತಿಯೊಬ್ಬರಿಗೂ ಮೊಬೈಲ್ ಪ್ರಪಂಚವಾಗಿ ಮಾರ್ಪಟ್ಟಿದೆ . ಏಳುವಾಗಲೂ, ಮಲಗುವಾಗಲೂ ಮೊಬೈಲ್ ನೋಡುತ್ತೇವೆ. ಅದೊಂದು ಕಿರಿಯ ಜಗತ್ತಾಗಿ ಮಾರ್ಪಟ್ಟಿದೆ. ಇಂತಹ ಮೊಬೈಲ್ ಕಳೆದುಕೊಂಡಾಗ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇಂತಹ ವೇಳೆ ಎದೆಗುಂದದೆ ಕೂಡಲೇ ಸಿಇಐಆರ್ ಪೋರ್ಟಲ್ ಮೂಲಕ ದೂರು ಸಲ್ಲಿಸಿ, ಮೊಬೈಲ್ ಖರೀದಿ ಮಾಡಿದ ವೇಳೆ ಐಎಂಇಐ ಕಾಯ್ದಿರಿಸಬೇಕು. ಮೊಬೈಲ್ ಕಳೆದುಕೊಂಡ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವುದು ಅವಶ್ಯವಾಗಿದೆ ಎಂದರು.
ಸಾರ್ವಜನಿಕರು ಮೊಬೈಲ್ ಬಳಸುವಾಗ ಸೂಕ್ತ ಸುರಕ್ಷಾ ಕ್ರಮಗಳನ್ನು ಪಾಲಿಸುವುದು ಅತ್ಯವಶ್ಯಕ. ಮೊಬೈಲ್ ಮೂಲಕ ನಿತ್ಯವೂ ಸಾರ್ವಜನಿಕರು ಮೋಸ ಹೋಗುತ್ತಿರುವ ಕುರಿತು ದಿನವೂ ಸೈಬರ್ ಠಾಣೆಗೆ ಹತ್ತಾರು ದೂರುಗಳು ದಾಖಲು ಆಗುತ್ತಿವೆ. ಸೈಬರ್ ಕ್ರೈಂ ಕುರಿತು ಹತ್ತಾರು ಜಾಗೃತಿ ಕಾರ್ಯಕ್ರಮ ಕೈಗೊಂಡು ಜನರಿಗೆ ಅರಿವು ಮೂಡಿಸಿದರೂ ಸಹ ಮೋಸಕ್ಕೆ ಒಳಗಾಗುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯಾವುದೇ ಹಣಕಾಸಿನ ಮೋಸಕ್ಕೆ ಒಳಗಾದರೇ 1930 ಸಂಖ್ಯೆಗೆ ಹಾಗೂ ಸಾರ್ವಜನಿಕರು ಸಮಸ್ಯೆಗೆ ಒಳಗಾದರೇ 112 ಗೆ ಕರೆ ಮಾಡಿ ದೂರು ಸಲ್ಲಿಸಿದರೆ, ಕೂಡಲೇ ಪೊಲೀಸರು ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದರು.
ಇದೇ ವೇಳೆ ಒಂದು ವರ್ಷದಲ್ಲಿ ಕಳ್ಳತನವಾಗಿದ್ದ 49 ಲಕ್ಷ ಮೌಲ್ಯದ 315 ಮೊಬೈಲ್ ಗಳನ್ನು ವಾರಸುದಾರರಿಗೆ ಮರಳಿ ನೀಡಲಾಗಿದೆ ಎಂದರು. ದಾಖಲಾಗಿದ್ದ ಪ್ರಕರಣದಲ್ಲಿ ಶೇ. 30 ರಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇನ್ನುಳಿದ ಮೊಬೈಲ್ ಕಳೆದುಕೊಂಡ ವಾರದಾರರಿಗೆ ಶೀಘ್ರದಲ್ಲೇ ಪತ್ತೆ ಹಚ್ಚಿ ಮರಳಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕುಶಾಲ್ ಚೌಕ್ಸೆ, ಡಿಸಿಪಿ ಯಲ್ಲಪ್ಪ ಕಾಶಪ್ಪನವರ, ಉತ್ತರ ವಿಭಾಗದ ಎಸಿಪಿ ಶಿವಪ್ರಕಾಶ್ ನಾಯ್ಕ, ಸಿಇಎನ್ ಎಸಿಪಿ ಶಿವರಾಜ್ ಕಟಕಭಾವಿ ಸೇರಿದಂತೆ ಎಲ್ಲ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್, ಸಿಬ್ಬಂದಿಗಳು ಹಾಗೂ ಮೊಬೈಲ್ ವಾರಸುದಾರರು ಉಪಸ್ಥಿತರಿದ್ದರು.