ಪೋಲಿಸ್ ಇನ್ಸ್ಪೆಕ್ಟರ್ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪೋಲಿಸ್ ಕಾನ್ಸ್ಟೇಬಲ್ ಓರ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯ ಉದ್ಯಮಬಾಗ್ ನಲ್ಲಿ ನಡೆದಿದೆ.
ಉದ್ಯಮಬಾಗ ಪೊಲೀಸ್ ಠಾಣೆಯ ಸಿಪಿಐ ದರೇಗೌಡ ಪಾಟೀಲ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ. ಕಾನ್ಸ್ಟೇಬಲ್ ವಿಠ್ಠಲ್ ಮುನ್ನಾಳ ಐದು ಪುಟಗಳ ಪತ್ರ ಬರೆದು ಆತ್ಮಹತ್ಯೆಗೆ ಯತ್ನಿಸಿದ್ದರು. ರಜೆ ವಿಷಯದಲ್ಲಿ ಸಿಪಿಐ ತಾರತಮ್ಯ ಮಾಡುತ್ತಿದ್ದಾರೆ, ಕರ್ತವ್ಯದಲ್ಲಿದ್ದರೂ ಗೈರು ಹಾಜರಾತಿ ಎಂದು ತೋರಿಸಿ ಪುಸ್ತಕದಲ್ಲಿ ಬರೆಸುತ್ತಾರೆ. ಠಾಣೆಯಲ್ಲಿ ವಿಪರೀತವಾಗಿ ಜಾತೀಯತೆ ಮಾಡುವುದು, ಮಹಿಳಾ ಸಿಬ್ಬಂದಿಯನ್ನು ನಿಂದಿಸುವುದು, ತಾನು ಕಾರ್ಯಾಂಗದ ಅಧಿಕಾರಿಯೆಂಬುದನ್ನು ಮರೆತು ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದಾರೆ.

ಹಫ್ತಾ ವಸೂಲಿ ಮಾಡಿ ಕೊಡುವ ಸಿಬ್ಬಂದಿಗೆ ರಾತ್ರಿ ಕರ್ತವ್ಯಕ್ಕೆ ಹಾಕಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿರುವ ವಿಠ್ಠಲ್ ಆತ್ಮಹತ್ಯೆ ಯತ್ನಕ್ಕೂ ಮುನ್ನ ಕೈ ಬರೆದಲ್ಲಿ ಐದು ಪುಟಗಳ ಪತ್ರ ಬರೆದಿದ್ದರು.
ಕರ್ತವ್ಯ ಸರದಿ ಪುಸ್ತಕ ಪ್ರತಿ, ವಿವಿಧ ಆದೇಶ ಪ್ರತಿಗಳ ಸಮೇತ ಪತ್ರವನ್ನು ಹಿರಿಯ ಅಧಿಕಾರಿಗಳಿಗೆ ರವಾನೆ ಮಾಡಲಾಗಿದೆ. ಡಿಜಿ ಐಜಿಪಿ, ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಖಡೇ ಬಜಾರ್ ಎಸಿಪಿ, ಗೃಹ ಸಚಿವರ ಕಚೇರಿ, ಮಾನವ ಹಕ್ಕು ಆಯೋಗ, ಪೊಲೀಸ್ ದೂರುಗಳ ಪ್ರಾಧಿಕಾರ ಘಟಕಕ್ಕೆ ಪತ್ರ ರವಾನೆ ಮಾಡಿದ್ದಾರೆ.